ಶಿರಸಿ: ಇಲ್ಲಿನ ಆಗ್ರಾ ಗಾಯಕಿ ಕಲಾವೃಂದವು ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾಗಿದ್ದ ಪಂ| ಜಿ.ಎಸ್.ಹೆಗಡೆ ಬೆಳ್ಳೇಕೇರಿ ಸ್ಮರಣಾರ್ಥ ಕೊಡ ಮಾಡುವ “ಬೆಳ್ಳೇಕೇರಿ ಮಾಸ್ತರ್ ಪ್ರಶಸ್ತಿ”ಗೆ ಪುಣೆಯ ಖ್ಯಾತ ಗಾಯಕಿ ಪೌರ್ಣಿಮಾ ಧುಮಾಳೆ ಭಾಜನರಾಗಿದ್ದಾರೆ.
ಇದೇ ಫೆಬ್ರುವರಿ ೨೨ ರಂದು ಇಲ್ಲಿನ ನೆಮ್ಮದಿ ಕುಟೀರ ಆವರಣದಲ್ಲಿ ನಡೆಯಲಿರುವ ಗುರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ೧೫ ಸಾವಿರ ರೂಪಾಯಿ ನಗದು, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನದ ನಂತರ ವಿದುಷಿ ಪೌರ್ಣಿಮಾ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಬೆಳ್ಳೇಕೆರೆ ಮಾಸ್ತರ್ ರ ಪರಂಪರೆಯ ಸಂಗೀತ ಕಲಾವಿದರಾದ ಸಾಗರದ ವಸುಧಾ ಶರ್ಮಾ, ಹುಬ್ಬಳ್ಳಿಯ ರೇಖಾ ಹೆಗಡೆ ಹಾಗೂ ಬೆಂಗೂರಿನ ಕಿರಣ ಭಟ್ಟ್ ಅವರು ಗಾಯನ ಪ್ರಸ್ತುತಪಡಿಸುವರು. ಅಲ್ಲದೇ ಉದಯೋನ್ಮುಖ ಕಲಾವಿದರಾದ ಶ್ರೀರಂಜಿನಿ, ಸಂವತ್ಸರ, ಶ್ರೀಧರ ಹಾಗೂ ಪ್ರತ್ಯೂಷಾ ಅವರು ಸಂಗೀತ ಸೇವೆ ಮಾಡುವರು.
ಇವರಿಗೆ ಸಂವಾದಿನಿಯಲ್ಲಿ ಪಂ.ಪ್ರಕಾಶ ಹೆಗಡೆ ಯಡಳ್ಳಿ, ಅಜಯ ವರ್ಗಾಸರ ಮತ್ತು ಸಂವತ್ಸರ ಸಾಗರ ಅವರು ಸಾಥ್ ನೀಡಲಿದ್ದಾರೆ. ತಬಲಾದಲ್ಲಿ ಅರುಣ ಭಟ್ಟ್, ಮಂಜುನಾಥ ಮೋಟಿನ್ಸರ ಮತ್ತು ವಿನಾಯಕ ಸಾಗರ ಅವರು ಸಾಥ್ ನೀಡುವರು.
ಇದೇ ಸಂಸ್ಥೆಯ ವತಿಯಿಂದ ಫೆಬ್ರುವರಿ ೨೩ ರಂದು ಬೆಳಿಗ್ಗೆ ೯ ರಿಂದ ಭಾರತೀಯ ಸಂಗೀತ ಕುರಿತ ಕಾರ್ಯಾಗಾರ ನಡೆಯಲಿದ್ದು ವಿದುಷಿ ಪೌರ್ಣಿಮಾ ಅವರು ನಡೆಸಿಕೊಡುವರು. ಖ್ಯಾತ ತಬಲಾ ವಾದಕರಾದ ಪಂ. ಮೋಹನ ಹೆಗಡೆ ಹುಣಸೇಕೊಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಬೆಳೆಸುವಲ್ಲಿ ಗಣನೀಯ ಕೊಡುಗೆ ನೀಡಿದ ಪಂ. ಜಿ.ಎಸ್ ಹೆಗಡೆ ಬೆಳ್ಳೇಕೇರಿ ಅವರ ಸ್ಮರಣಾರ್ಥ, ಇಲ್ಲಿನ ಆಗ್ರಾ ಗಾಯಕಿ ಕಲಾವೃಂದವು ಬೆಳ್ಳೇಕೇರಿ ಮಾಸ್ತರ್ ಪ್ರಶಸ್ತಿಯನ್ನು ಸ್ಥಾಪಿಸಿದೆ. ಮೊದಲ ಪ್ರಶಸ್ತಿಗೆ ಖ್ಯಾತ ಗಾಯಕರಾದ ವಿದುಷಿ ಭಾರತೀ ಪ್ರತಾಪ್ ಅವರು ಭಾಜನರಾಗಿದ್ದರು. ಎರಡನೇ ವರ್ಷದ ಪ್ರಶಸ್ತಿಗೆ ವಿ. ಪೌರ್ಣಿಮಾ ಧುಮಾಳೆ ಅವರು ಆಯ್ಕೆಯಾಗಿದ್ದಾರೆ. ತಾಯಿಯಿಂದ ಕಿರಾಣಾ ಘರಾನಾ ಶೈಲಿಯಲಿ ಗಾಯನ ಕಲಿಕೆ ಆರಂಭಿಸಿದ ಅವರು ಮುಂದೆ ಆಗ್ರಾ ಘರಾನೆಯ ಖ್ಯಾತ ಗಾಯಕರೂ, ವಾಗ್ಗೇಯಕಾರರೂ ಆಗಿದ್ದ ಪಂ. ಬಬನರಾವ್ ಹಲದನಕರ್ ಅವರಲ್ಲಿ ಆಳವಾದ ಆದ್ಯಯನ ಮಾಡಿ ದೇಶದ ಖ್ಯಾತನಾಮ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಗಾಯಕಿಯಾಗಿ, ಸಂಗೀತ ತಜ್ಞೆಯಾಗಿಯೂ ಅವರು ಹೆಸರು ವಾಸಿಯಾಗಿದ್ದಾರೆ.